ಮೊಹಮ್ಮದ್ ಅಲಿ ಖಮರ್ರವರು ಕೋಲ್ಕತಾದ ಬಾಕ್ಸಿಂಗ್ ಚಾಂಪಿಯನ್ ಆಗಿದ್ದಾರೆ. ಅವರು ೧೯೮೦ ರಲ್ಲಿ ಪಶ್ಚಿಮ ಬಂಗಾಳ ರಾಜ್ಯದ ರಾಜಧಾನಿಯಾದ ಕೊಲ್ಕತ್ತಾದ ಕಿದಿರ್‌ಪುರ್‌ನಲ್ಲಿ ಜನಿಸಿದರು. == ಬಾಲ್ಯ == ಖಮರ್ ಅವರು ಮಧ್ಯಮ ವರ್ಗದ ಕುಟುಂಬಕ್ಕೆ ಸೇರಿದವರು. ಅವರ ತಂದೆಯವರು ಬಾಕ್ಸಿಂಗ್‍ನ ಅಭಿಮಾನಿಯಾಗಿದ್ದು, ಅವರ ಮಗ ಯಶಸ್ವಿ ಬಾಕ್ಸರ್ ಆಗಿ ಹೊರಹೊಮ್ಮುವುದನ್ನು ನೋಡಲು ಬಯಸಿದ್ದರು. ಖಮರ್‌ರವರ ತಂದೆ, ಅವರನ್ನು ಕಿದಿರ್‌ಪುರ್‌ನ ದೈಹಿಕ ಶಿಕ್ಷಣದ ಶಾಲೆಗೆ ಸೇರಿಸಿದರು. ಅವರು ಎಂಟರ ವಯಸ್ಸಿನಲ್ಲೇ ಬಾಕ್ಸಿಂಗ್ ತರಬೇತಿ ಪಡೆದುಕೊಂಡರು. ಆ ಸಂಸ್ಥೆಯಲ್ಲಿ, ಖಮರ್‌ ಚೀನ ಭಾಯಿರವರನ್ನು ಭೇಟಿಯಾದರು. ಅತ್ಯುತ್ತಮ ಬಾಕ್ಸರ್ ಮತ್ತು ತರಬೇತುದಾರರಾಗಿದ್ದ ಚೀನ ಭಾಯಿಯವರು ಅಲಿಯವರಲ್ಲಿರುವ ಪ್ರತಿಭೆಯನ್ನು ಗುರುತಿಸಿ ಅವರನ್ನು ಪ್ರಬಲವಾದ ಬಾಕ್ಸರ್ ಆಗಿ ಪರಿವರ್ತಿಸಬೆಕು ಎಂದು ನಿರ್ಧರಿಸಿದರು. ಚೀನ ಭಾಯಿಯವರ ಮಾರ್ಗದರ್ಶನದಲ್ಲಿ, ಬಾಕ್ಸಿಂಗ್‍ನ ಮೂಲಭೂತ ಅಂಶಗಳ ಕಲಿಕೆಯನ್ನು ಖಮರ್‌ರವರು ಪ್ರಾರಂಭಿಸಿದರು. == ವೃತ್ತಿಜೀವನ == ೧೯೯೧ ರಲ್ಲಿ ಹೌರಾದಲ್ಲಿ ನಡೆದ ಪಶ್ಚಿಮ ಬಂಗಾಳ ಅಂತರ ಜಿಲ್ಲಾ ಚಾಂಪಿಯನ್‍ಶಿಪ್‍ನ ಗೆಲುವು ಖಮರ್‌ರವರ ಮೊದಲ ಸಾಧನೆಯಾಯಿತು. ಆಗ ಅವರು ಕೇವಲ ೧೧ ವರ್ಷದವರಾಗಿದ್ದರು. ಇದಲ್ಲದೆ, ಖಮರ್‌ ಅವರು ಸಬ್-ಜೂನಿಯರ್ ಬಾಕ್ಸಿಂಗ್ ಚಾಂಪಿಯನ್‍ಶಿಪ್‍ ಪ್ರಶಸ್ತಿಯನ್ನು ಲೈಟ್ ಫ್ಲೈವೈಟ್ ವಿಭಾಗದಲ್ಲಿ ಸತತವಾಗಿ ೫ ಬಾರಿ ಪಡೆದರು. ೧೯೯೨ ರಿಂದ ೧೯೯೬ ರವರೆಗೆ ಪಶ್ಚಿಮ ಬಂಗಾಳದ ಬಾಕ್ಸಿಂಗ್‍ನ ಕಣದಲ್ಲಿ ಪ್ರಾಬಲ್ಯ ಸಾಧಿಸಿದರು. ೨೦೦೩ ರಲ್ಲಿ, ನವದೆಹಲಿಯಲ್ಲಿ ನಡೆದ ೪೯ ನೆಯ ರಾಷ್ಟ್ರೀಯ ಬಾಕ್ಸಿಂಗ್ ಚಾಂಪಿಯನ್‍ಶಿಪ್‍ ಅನ್ನು ಅವರು ಲೈಟ್ ಫ್ಲೈವೈಟ್ ವರ್ಗದಲ್ಲಿ ಗೆದ್ದರು. ಸೆಮಿ ಫೈನಲ್ ಪಂದ್ಯದಲ್ಲಿ, ಅವರು ಅರುಣ್ ಸಿಂಗ್ ಅವರನ್ನು ಸೋಲಿಸಿ, ಫೈನಲ್ ಪಂದ್ಯದಲ್ಲಿ ಖಮರ್‌ ಅವರು ಸೇವೆಯಲ್ಲಿದ್ದ ಖಿಮಾನಂದ ಬೆಲ್ವಾಲ್‌ರವರನ್ನು ೨೩-೨೦ ಅಂಕದ ಅಂತರದಲ್ಲಿ ಸೋಲಿಸಿದರು. ಖಮರ್‌ರವರು ಡೊಮೆಸ್ಟಿಕ್ ಬಾಕ್ಸಿಂಗ್ ಸರ್ಕ್ಯೂಟ್‍ನಲ್ಲಿ ಅತ್ಯುತ್ತಮವಾಗಿ ಪ್ರದರ್ಶಿಸಿದರು. ಮೊಹಮ್ಮದ್ ಅಲಿ ಖಮರ್‌ ೧೯೯೯ ರಲ್ಲಿ ಹೂಸ್ಟನ್‍ನಲ್ಲಿ ನಡೆದ ವಿಶ್ವ ಬಾಕ್ಸಿಂಗ್ ಚಾಂಪಿಯನ್‍ಶಿಪ್‍ನಲ್ಲಿ ರಾಷ್ಟ್ರವನ್ನು ಪ್ರತಿನಿಧಿಸಲು ಆಯ್ಕೆಯಾದಾಗುವುದರ ಮೂಲಕ ಭಾರತವನ್ನು ಅಂತರರಾಷ್ಟ್ರೀಯ ಬಾಕ್ಸಿಂಗ್ ಕ್ಷೇತ್ರಕ್ಕೆ ಪರಿಚಯಿಸಿದರು. ಪಂದ್ಯಾವಳಿಯಲ್ಲಿ ಗೆಲುವು ಸಾಧಿಸಲು ಸಾಧ್ಯವಾಗಲಿಲ್ಲವಾದರೂ, ಅವರು ಆ ಪಂದ್ಯಾವಳಿಯಲ್ಲಿ ಬಹಳ ಭರವಸೆಯ ಪ್ರದರ್ಶನ ನೀಡಿದರು ಮತ್ತು ಸ್ಪರ್ಧೆಯ ಕ್ವಾರ್ಟರ್ ಫೈನಲ್ ರೌಂಡ್ ತಲುಪಿದರು, ಪಂದ್ಯಾವಳಿಯ ಫೈನಲ್ ರೌಂಡ್‍ನಲ್ಲಿ ಅವರು ಯುನೈಟೆಡ್ ಸ್ಟೇಟ್ಸ್‌ನ ಬಾಕ್ಸರ್ ರಾನ್ ಸಿಲರ್‌ಗೆ ಸೋತರು. ೨೦೦೨ ರಲ್ಲಿ ಖಮರ್‌ರವರು ಪ್ರೆಸಿಡೆಂಟ್ ಕಪ್ ಬಾಕ್ಸಿಂಗ್ ಚಾಂಪಿಯನ್‍ಶಿಪ್‍ನ ಕ್ವಾರ್ಟರ್ ಫೈನಲ್ ಸುತ್ತಿಗೆ ತಲುಪಿದರು, ಅಲ್ಲಿ ಅವರು ಥೈಲ್ಯಾಂಡಿನ ಅದ್ಭುತ ಬಾಕ್ಸರ್ ಆಗಿರುವ ಸುಬಾನ್ ಪನ್ನೋಮ್‍ಗೆ ಸೋತರು. ಅದೇ ವರ್ಷದಲ್ಲಿ, ಖಮರ್‌ರವರು ಮ್ಯಾಂಚೆಸ್ಟರ್ ಕಾಮನ್‍ವೆಲ್ತ್ ಕ್ರೀಡಾಕೂಟದಲ್ಲಿ ಚಿನ್ನದ ಪದಕವನ್ನು ಗೆದ್ದುಕೊಂಡು ಇಡೀ ಪ್ರಪಂಚವನ್ನು ಅಚ್ಚರಿಗೊಳಿಸಿದರು. ಅಂತಿಮ ಸುತ್ತಿನಲ್ಲಿ, ಇಂಗ್ಲೆಂಡ್‌ನ ಬಾಕ್ಸರ್ ಆದ ಡಾರ್ರೆನ್ ಲ್ಯಾಂಗ್ಲೆಯವರನ್ನು ೪೩ ಸೆಕೆಂಡುಗಳು ಉಳಿದಿರುವಾಗ ೨೭-೨೫ ಅಂಕಗಳ ಅಂತರದಿಂದ ಸೋಲಿಸಿ ಕಾಮನ್‍ವೆಲ್ತ್ ಕ್ರೀಡಾಕೂಟದಲ್ಲಿ ಚಿನ್ನದ ಪದಕವನ್ನು ತಂದುಕೊಟ್ಟ ಮೊದಲ ಭಾರತೀಯ ಬಾಕ್ಸರ್ ಎನಿಸಿಕೊಂಡರು. ಕಾಮನ್‍ವೆಲ್ತ್ ಕ್ರೀಡಾಕೂಟದಲ್ಲಿ ಚಿನ್ನದ ಪದಕವನ್ನು ಗೆದ್ದ ನಂತರ, ಗಾಯಗಳ ದೀರ್ಘ ಸರಪಳಿಯನ್ನು ಎದುರಿಸಿದರು. ಕ್ರೀಡೆಯ ಅಡ್ಡಪರಿಣಾಮಗಳು ಖಮರ್‌ರವರಿಗೆ ಮುಂದೆ ತಮ್ಮ ವೃತ್ತಿಜೀವನದಲ್ಲಿ ಯಾವುದೇ ಪದಕಗಳನ್ನು ತಮ್ಮದಾಗಿಸಿಕೊಳ್ಳಲು ದಾರಿಮಾಡಿಕೊಡಲಿಲ್ಲ. ಅವರು ೨೦೦೨ ರ ಬುಸಾನ್ ಏಷ್ಯನ್ ಕ್ರೀಡಾಕೂಟದಲ್ಲಿ ಆಡಿದರು ಮತ್ತು ಈವೆಂಟ್‍ನ ಕ್ವಾರ್ಟರ್ ಫೈನಲ್ ಸುತ್ತಿನಲ್ಲಿ ಸೋತರು. ಖಮರ್‌ರವರು ಕಣ್ಮಿಂಚಿನಂತಿನ ಪಾದಚಲನೆ, ರೇಜರ್‌ನಂತ ಹರಿತವಾದ ದಾಳಿ, ರೈಟ್ ಅಪ್ಪರ್ ಕಟ್ ಮತ್ತು ಸ್ಟ್ರೈಟ್ ರೈಟ್ ಲೆಫ್ಟ್ ಹುಕ್‍ನ ಮಾರಣಾಂತಿಕ ಸಂಯೋಜನೆಯ ಮೂಲಕ ತನ್ನ ಎದುರಾಳಿಯನ್ನು ಸದೆಬಡಿಯುವ ವಿಶೇಷವಾದ ಕೌಶಲ್ಯವನ್ನು ಹೊಂದಿದ್ದರು. ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಅವರ ಅತ್ಯುತ್ತಮವಾದ ಪ್ರದರ್ಶನಕ್ಕೆ ೨೦೦೨ ರಲ್ಲಿ ಭಾರತ ಸರ್ಕಾರ ಪ್ರತಿಷ್ಠಿತ ಅರ್ಜುನ ಪ್ರಶಸ್ತಿಯನ್ನು ನೀಡಿ ಗೌರವಿಸಿತು. ಕಿದಿರ್‌ಪುರ್‌ ಈಗ ಭಾರತದ ಮಹಿಳಾ ಬಾಕ್ಸರ್‌ಗಳ ಕೇಂದ್ರವಾಗಿದೆ. ಅಲ್ಲಿನ ತರಬೇತುದಾರರು ಖಮರ್‌ ಅವರನ್ನು ತಮ್ಮ ಪ್ರೇರಣೆಯಾಗಿ ಪರಿಗಣಿಸುತ್ತಾರೆ. == ಪ್ರಶಸ್ತಿಗಳು == ಅರ್ಜುನ ಪ್ರಶಸ್ತಿ, ೨೦೦೨ ದ್ರೋಣ ಪ್ರಶಸ್ತಿ, ೨೦೨೨ == ಉಲ್ಲೇಖಗಳು ==